ಉತ್ತರ ಪ್ರದೇಶ: ಸಂಸ್ಕಾರ ಹಿಂದು ಸಮಾಜದ ತಳಪಾಯ. ಹೀಗಾಗಿ ಪಾರಂಪರಿಕ, ಸಾಂಸ್ಕೃತಿಕ ಮೌಲ್ಯಗಳು ಹಾಗೂ ನೈತಿಕ ತತ್ವಗಳ ಆಧಾರದ ಮೇಲೆ ಸಮಾಜವನ್ನು ನಿರ್ಮಿಸಲು ಹಿಂದುಗಳು ಶ್ರಮಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ್ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಉತ್ತರ ಪ್ರದೇಶದ ಅಲೀಗಢಕ್ಕೆ 5 ದಿನಗಳ ಪ್ರವಾಸ ಕೈಗೊಂಡಿರುವ ಮೋಹನ್ ಭಾಗವತ್ ಅವರು, ಎಚ್.ಬಿ ಇಂಟರ್ ಕಾಲೇಜು ಹಾಗೂ ಪಂಚನ್ ನಗರಿ ಪಾರ್ಕ್ನಲ್ಲಿ ಸಂಘಟನೆಯ ಎರಡು ಶಾಖೆಗಳ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು.
ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದು ಸ್ಮಶಾನ ಎಂಬ ತತ್ವ ಅನುಸರಿಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಹಿಂದುಗಳು ಶ್ರಮಿಸಬೇಕು. ಶಾಂತಿ ಸ್ಥಾಪನೆಗೆ ಶ್ರಮಿಸುವ ಜಾಗತಿಕ ಜವಾಬ್ದಾರಿ ಭಾರತದ ಮೇಲಿದೆ. ಈ ಮಹತ್ವದ ಹೊಣೆಗಾರಿಕೆ ಪೂರೈಸಲು ಸಾಮಾಜಿಕ ಒಗ್ಗಟ್ಟು ಸಾಧಿಸುವುದು ಭಾರತದ ಪಾಲಿಗೆ ಬಹಳ ಮುಖ್ಯ ಎಂದರು.